Skip to main content

ಕಡಿಮೆಯಾಗುತ್ತಿದೆಯಾ ಶಿಕ್ಷಕರ ಮೇಲಿನ ಗೌರವ?

     
  ಗುರು ಶಿಷ್ಯರದ್ದು ಅವಿನಾಭಾವ ಸಂಬಂಧ. ಜೀವನದಲ್ಲಿ ಏನಾದರು ಗೆಲುವು ಸಿಕ್ಕಾಗ ಮೊದಲಿಗೆ ನೆನಪಾಗುವವರೇ ನಮ್ಮೆಲ್ಲಾ ಆದರದ ಶಿಕ್ಷಕರು. ನಮ್ಮ ಭವಿಷ್ಯದ ಮಾರ್ಗದರ್ಶಕರು ಅವರೇ. ಅಜ್ಞಾನವೆಂಬ ಕತ್ತಲನ್ನು, ಜ್ಞಾನವೆಂಬ ಜ್ಯೋತಿಯಿಂದ ಬೆಳಗುವವರು ಮತ್ತಾರು? ತನಗೆ ಒಲಿಯದ ಯಶಸ್ಸು , ತನ್ನ ಶಿಷ್ಯನಿಗೆ ಸಿಕ್ಕಾಗ ಸಂತಸ ಪಡುವವನೇ ಗುರು. ಯಶಸ್ಸಿನಲ್ಲಿ  ಎರಡು   ಅಂಶಗಳು ಬಹು ಮುಖ್ಯ . ಏನು ಮಾಡಬೇಕೆಂಬ ಗುರಿ ಒಂದಾದರೆ, ಏನು ಮಾಡಬಾರದು ಎಂಬುದು ಮತ್ತೊಂದು. ಆ ಶಿಕ್ಷಕ 2 ನೇ ಅಂಶದಲ್ಲಿ ಸೋಲನ್ನನುಭವಿಸಿ ವಿದ್ಯಾರ್ಥಿಗೆ ತಿಳಿ ಹೇಳುತ್ತಾನೆ. ಎಲ್ಲಿ ಎಡವಬಾರದು ಎಂದು ಸ್ಪಷ್ಟವಾಗಿ ತೋರಿಸಿಕೊಡುತ್ತಾನೆ....
      ಬೆತ್ತ ಕೈಯಲ್ಲಿ ಹಿಡಿದರೆ, ಮಕ್ಕಳು ಸದ್ದಡಗಿಸಿ ಬೆಂಚಿನಲ್ಲಿ
ಕುಳಿತುಕೊಳ್ಳುತ್ತಿದ್ದರು.ದುರಾದೃಷ್ಟವಾಶಾತ್ ಆ ಬೆತ್ತ ಸಹಿತ ಕೈಗಳಿಗೆ ಕೆಲಸ ಕೊಟ್ಟಾರೆ ನೋವನ್ನು ತಡೆದುಕೊಳ್ಳಲಾರದೇ ಕಣ್ಣ ನೀರು ಕಣ್ಣನ್ನೇ ಬಿಟ್ಟು ಹೊರಡುವುದು! ಪೆಟ್ಟು ಬಿದ್ದ ಜಾಗದಲ್ಲಿ ಬಿಸಿನೋವಿನ ಅನುಭವ! ಆ ಅನುಭವದ ತೀವ್ರತೆ, ಮತ್ತೊಮ್ಮೆ ಅಂತಹ ತಪ್ಪೆಸಗದಂತೆ ನೋಡಿಕೊಳ್ಳುವಂತಿತ್ತು. ತಲೆಗೆ ಹಾಕುತಿದ್ದ  ನಾಲ್ಕು  ಕುಟ್ಟಿ, ಹಿಂಡಿದಾಗ ಕೆಂಪಾಗುತ್ತಿದ್ದ ಕಿವಿಗಳು,  ಬಸ್ಕಿ ತೆಗೆಸಿದಾಗ ಸೆಳೆಯುತ್ತಿದ್ದ ಸ್ನಾಯುಗಳು ಪಶ್ಚಾತಾಪದ ಸಂಕೇತಗಳು! " ಬಿಟ್ಟು ಬಿಡಿ ಸಾರ್ ನನ್ನನ್ನು "ಎಂದು ಪರಿಪರಿಯಾಗಿ ಕೇಳಿಕೊಳ್ಳುತ್ತಿದ್ದ ವಿದ್ಯಾರ್ಥಿಗಳು  ಅದೇ ಗುರುಗಳನ್ನು ಸದಾ ಹೃದಯದಲ್ಲಿಟ್ಟಿದ್ದರು. ಆ ಪ್ರೀತಿಯ ಗುರುಗಳ ಬೆಲೆ, ಶಾಲೆಯನ್ನು ಬಿಟ್ಟು ಹೋಗುವಾಗ ಅರ್ಥವಾಗುತ್ತಿತ್ತು. ಹೀಗಿತ್ತು ನೋಡಿ, ಅಂದಿನ ನಮ್ಮ ಶಿಕ್ಷಣ ವ್ಯವಸ್ಥೆ. ಶಿಕ್ಷಣದ ಸ್ವರ್ಣಯುಗ ಎಂದಾರೆ ತಪ್ಪಾಗದು.
    ಒಂದಷ್ಟು ಜನ ನಮ್ಮ ಫೇವರೇಟ್ ಟೀಚರ್ಸ್.  ಮತ್ತೊಂದಷ್ಟು ಜನರ ಪಾಠ ,ನೀರಿನಲ್ಲಿ ಹೋಮ ಮಾಡಿದಂತಹ ಭ್ರಾಂತಿ! ಆಗಾಗ ಬಾಯಿ ತೆರೆಯುವ ಸಂಪ್ರದಾಯ! ಅಲ್ಲಲ್ಲಿ ತಲೆಯಾಡಿಸಿ ಸರ್ವವೂ ಅರ್ಥವಾಯಿತು ಎಂದು ತೋರಿಸುವ ವೈಖರಿ ಸರ್ವೇ ಸಾಮಾನ್ಯ ಬಿಡಿ. ಮುಂದಿನ ಅವಧಿಯ ಕಾಪಿ ಪುಸ್ತಕವನ್ನು ಕದ್ದು ಮುಚ್ಚಿ ಬರೆದು ಸಿಕ್ಕಿಬೀಳುವ ಮಹತ್ಕಾರ್ಯ ಮಾಡಿದವರಲ್ಲಿ ನಾವು-ನೀವೂ ಕೂಡಾ ಒಬ್ಬರು.
  
       ಎಲ್ಲದಕ್ಕೂ ಒಂದು ಮಿತಿ ಇದೆ ಅಲ್ಲವೇ? ಆ ಮಿತಿ ಮೀರಿದಾಗ  ಗುರು ಶಿಷ್ಯರ ನಡುವಿನ ಅಂತರ ಹೆಚ್ಚಾಗುವುದು. ಶಿಕ್ಷಕರು ತರಗತಿಯಲ್ಲಿರುವಾಗಲೇ ನಾನಾ ಬಗೆಯ ಶಬ್ಧ ಹೊರಹೊಮ್ಮಿಸುತ್ತಾ ಇಡೀ ತರಗತಿಯನ್ನೇ ಬಲಿ ತೆಗೆದುಕೊಳ್ಳುವುದು ಜಾಸ್ತಿಯಾಗಿದೆ. ಸಿಸಿ ಕ್ಯಾಮರಾ ಹಾಕುವುದು ವಿದ್ಯಾರ್ಥಿ ಸ್ವಾತಂತ್ರ್ಯ ಕಸಿಯುವ ಯತ್ನ ಎಂದು ಭಾವಿಸಬೇಡಿ. ಕ್ಯಾಮರಾಗಳಿಗೂ ಹೆದರದೇ, ಶಿಕ್ಷಕರಿಗೆ ಎದುರುತ್ತರ ನೀಡುವುದು ಅದೆಷ್ಟು ಸರಿ? ಯಾವ ಏಟಿಗೂ ತಲೆ ಕೆಡಿಸದ ಎಮ್ಮೆ ಚರ್ಮದವರು ಅಲ್ಪಬುದ್ಧಿ ಪ್ರದರ್ಶಿಸುವವರು. ಕನಿಷ್ಠ ಪಕ್ಷ ತರಗತಿಯೊಳಗಾದರೂ ಆ ಗೌರವ ನೀಡಬೇಕಲ್ಲವೇ?
ಇಂತಹ ಚಟುವಟಿಕೆಗಳು ಹೊಸ ಟೀಚರ್ ಬಂದಾಗ ಕಾಣಿಸಿಕೊಳ್ಳುವುದು ಹೆಚ್ಚು. ಹೊಸದಾಗಿ ನೇಮಕಗೊಂಡಾಗ ಆ ವೃತ್ತಿಯಲ್ಲಿ ಅನನುಭವ ಇರುವುದು ಸಹಜ. ಹಾಗೆಂದು ತರಗತಿಯಲ್ಲೇ ಅನಾಗರೀಕರಂತೆ ನಡೆಯುವುದು ಎಂದಿಗೂ ಸಹಿಸಲಾಗದ ಸಂಗತಿ. ಕೆಲವು ವರುಷಗಳ ನಂತರ ಅವರೇ ನಿಮ್ಮ ಫೇವರೇಟ್ ಗುರುಗಳಾಗಬಹುದು. ನನ್ನ ಉಪನ್ಯಾಸಕರೊಬ್ಬರು ಹೇಳಿದ ಮಾತೊಂದನ್ನು ಈಗಲೂ ನೆನಪಿಸಬಲ್ಲೆ. " ನಿಮ್ಮಲ್ಲಿ ಯಾರಾದರೂ ಶಿಕ್ಷಕರಾಗಬೇಕೆಂದಿದ್ದರೆ, ಆದಷ್ಟು ಘನವಾಗಿರಿ! ಮುಂದೆ ದೊರಕುವ ವಿದ್ಯಾರ್ಥಿಗಳನ್ನು ಎದುರಿಸುವುದು ಬಹಳಷ್ಟು ಕಠಿಣವಿದೆ...."
    ಸಂಬಳಕ್ಕಾಗಿ ಪಾಠ ಮಾಡುವುದೇ ಆಗಿದ್ದರೆ, ಗದ್ಯ-ಪದ್ಯಗಳಲ್ಲಿ ಪ್ರೀತಿ ಬೆರೆಸದೇ  ತುಟಿಯಾಡಿಸಿ ಹೋಗಬಹುದಿತ್ತು! ಇನ್ನಾದರೂ ಅವರ ಗೌರವಕ್ಕೆ ಚ್ಯುತಿ ಬಾರದಂತೆ ನಡೆದುಕೊಳ್ಳುತ್ತಾ, ಸೌಜನ್ಯದಿಂದಿರೋಣ.......
    
   
  
    
   

Comments

Post a Comment